Powered By Blogger

ಇಲ್ಲಿ ಕ್ಲಿಕ್ ಮಾಡಿ

Friday, November 18, 2011

ಪ್ರೇಮ ಪತ್ರ 1


(ಈ ಪತ್ರ ಕೇವಲ ಊಹಾಲೋಕದಲ್ಲಿ ವಿಹರಿಸುತ್ತಾ ಬರೆದದ್ದು. ಯಾವ ವ್ಯಕ್ತಿಗೂ ಸಂಬಂಧಿಸಿ ಬರೆದದ್ದಲ್ಲ. ನಾನೇ ಬರೆದ "ನವಿಲು ಗರಿ" ಎಂಬ ಕಥೆಯಿಂದ ಇದನ್ನು ಆರಿಸಿಕೊಂಡು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಓದಿದ ನಂತರ ಕಾಮೆಂಟ್ ಮಾಡುವುದನ್ನು ಮರೆಯಬೇಡಿ - ಇಂತಿ ತಮ್ಮ ಶೇಖರ್ ಹಾಸಿಗಲ್).


“…….ಗೆ,

ಪತ್ರ ಬರೆಯುವ ಯಾರೊಬ್ಬರೂ ಸಂಬೋಧನೆಯ ವಿಷಯದಲ್ಲಿ ನನ್ನಷ್ಟು ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ನಿನಗೋಸ್ಕರ ಸರಿಯಾದ ಸಂಬೋಧನೆ ಬಳಸುವ ಯೋಚನೆಯಲ್ಲಿ ಸರಿ ಸುಮಾರು ಹದಿನೈದು ಪೇಜ್‌ಗಳು ನಾನು ಕುಳಿತಿರುವ ಕುರ್ಚಿಯ ಸುತ್ತಲೂ ಮುದ್ದೆಯ ರೂಪದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇಷ್ಟಾದರೂ ಸರಿಯಾದ ಸಂಬೋಧನೆ ಹೊಳೆಯದೆ, ಕೊನೆಗೆ ಯಾವ ಸಂಬೋಧನೆಯನ್ನು ಬಳಸದೆ ಪತ್ರವನ್ನು ಆರಂಭಿಸುತ್ತಿರುವೆ. ಈ ಸಣ್ಣ ತಪ್ಪಿಗೆ ಕ್ಷಮೆ ಇರಲಿ.

ಒಂದು ವಾರದ ನಂತರವಷ್ಟೆ ನಮ್ಮಿಬ್ಬರ ಮದುವೆಯಾಗುವುದು ನಿಶ್ಚಯವಿರುವಾಗ ನಾನೇಕೆ ಈ ಪತ್ರ ಬರೆಯುತ್ತಿದ್ದೇನೆಂಬ ಪ್ರಶ್ನೆ ಈಗಾಗಲೆ ನಿನ್ನನ್ನು ಕಾಡಲಾರಂಭಿಸಿರಬಹುದು. ಅದಕ್ಕಾಗಿಯೆ ಆರಂಭದಲ್ಲಿಯೆ ಈ ದೀರ್ಘ ಪತ್ರದ ಉದ್ದೇಶ ಸ್ಪಷ್ಟ ಪಡಿಸುತ್ತಿರುವೆ. ಪ್ಲೀಜ್, ಗಮನವಿಟ್ಟು ಓದು.

ಒಂದು ಸಣ್ಣ ನಿಜ ಹೇಳಲಾ ? ನನಗೆ ಅರೇಂಜ್ ಮ್ಯಾರೇಜ್ ಆಗುವುದಕ್ಕಿಂತಲೂ ಲವ್ ಮ್ಯಾರೇಜ್ ಆಗುವದರಲ್ಲಿಯೆ ಹೆಚ್ಚು ಒಲವಿತ್ತು. ಆದರೇನು ಮಾಡೋದು, ನಾನು ಯಾರನ್ನಾದಲೂ ಪ್ರೀತಿಸುವುದಕ್ಕೆ ಮುಂಚೆಯೆ ಹಿರಿಯರು ನನ್ನ ಮದುವೆಯನ್ನು ನಿನ್ನ ಜೊತೆ ನಿಶ್ಚಯಿಸಿ ಬಿಟ್ಟರು. ನಿನ್ನನ್ನು ನೋಡುವುದಕ್ಕೆ ಮುಂಚೆ ಹಿರಿಯರ ನಿಶ್ಚಯದ ಮುಂದೆ ಪ್ರಶ್ನೆ ಚಿಹ್ನೆ ಇಡಬೇಕೆಂದು ನಿರ್ಧರಿಸಿದ್ದೆ. ಆದರೆ ನಿನ್ನನ್ನು ನೋಡುತ್ತಲೆ ನನ್ನ ನಿರ್ಧಾರ ಬದಲಾಯಿತು. ಮದುವೆಯಾದ ನಂತರ ನಿನ್ನನ್ನೆ ಪ್ರೀತಿಸಿದರಾಯಿತು ಎಂದುಕೊಂಡೆ.

ಮದುವೆಯಾಗುವ ಮುಂಚೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವುದು ಮದುವೆಯ ನಂತರದ ಜೀವನದ ಮೇಲೆ ಆರೋಗ್ಯಕರ ಪ್ರಭಾವ ಬೀರುತ್ತದೆ. ಹೆಣ್ಣಾಗಲಿ ಗಂಡಾಗಲಿ ತನ್ನ ಸಂಗಾತಿಯ ಮಾನಸಿಕತೆಯ ಬಗ್ಗೆ, ಯೋಚಿಸುವ ರೀತಿಯ ಬಗ್ಗೆ, ಭಾವನೆಗಳ ಬಗ್ಗೆ, ವಿಚಾರಗಳ ಬಗ್ಗೆ, ಅಭಿಪ್ರಾಯಗಳ ಬಗ್ಗೆ, ಬೇಕು-ಬೇಡಗಳ ಬಗ್ಗೆ, ಮನೋಧೋರಣೆಗಳ ಬಗ್ಗೆ....... ಮದುವೆಗೆ ಮುಂಚೆಯೆ ಅರಿತುಕೊಳ್ಳುವುದು ಯಶಸ್ವಿ ಮತ್ತು ಮಧುರ ದಾಂಪತ್ಯ ಜೀವನಕ್ಕೆ ಮುನ್ನುಡಿಯಾಗುತ್ತದೆಂದು ನನ್ನ ಅಭಿಪ್ರಾಯ.

ನಿನ್ನ ಯೋಚನೆಗಳನ್ನು ತಿಳಿಯಲು ನನ್ನಿಂದ ಸಧ್ಯಕ್ಕಂತೂ ಸಾಧ್ಯವಿಲ್ಲ. ಆದರೆ ನನ್ನ ಯೋಚನೆಗಳನ್ನಾದರೂ ನಿನಗೆ ತಿಳಿಸುವ ಇಚ್ಛೆ ಮತ್ತು ಉದ್ದೇಶದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಪ್ಲೀಜ್, ಸಾಧ್ಯವಾದಷ್ಟು ನನ್ನ ಭಾವನೆಗಳೊಂದಿಗೆ ಸ್ಪಂದಿಸುವುದರೊಂದಿಗೆ ನನ್ನನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾ ಓದು.

ಯಾರೊ ಓಬ್ಬ ತತ್ವಜ್ಞಾನಿ "Share your happiness with all but suffer your sorrow alone" (ಸಂತೋಷವನ್ನು ಎಲ್ಲರೊಂದಿಗೂ ಹಂಚಿಕೊ, ಆದರೆ ದು:ಖ ಮಾತ್ರ ನಿನೊಬ್ಬನೆ ಅನುಭವಿಸು) ಎಂದಿದ್ದಾನೆ. ಅದೇಕೊ ಈ ಮಾತು ನನ್ನ ಗಂಟಲಿನ ಕೆಳಗಡೆ ಇಳಿಯುತ್ತಿಲ್ಲ. ಇಡೀ ಜಗತ್ತಿನೊಂದಿಗೆ ಈ ಸೂತ್ರ ಪಾಲಿಸಬೇಕೆಂಬುದೇನೊ ನಿಜ, ಆದರೆ ಬಾಳ ಸಂಗಾತಿಯೊಂದಿಗೆ...... ಊಹ್ಞೂ, ಖಂಡಿತ ಈ ಸೂತ್ರ ಪಾಲಿಸಬಾರದು. ಒಂದು ವಿಷಯವಂತೂ ನಾನು ಬಲವಾಗಿ ನಂಬುತ್ತೇನೆ. ಗಂಡ-ಹೆಂಡತಿ ಸಂತೋಷವಾಗಿರಬೇಕೆಂದರೆ, They have to share everything (ಅವರು ಎಲ್ಲವನ್ನೂ ಹಂಚಿಕೊಳ್ಳಬೇಕು). ಸಂತೋಷವಿರಲಿ ದು:ಖವಿರಲಿ ಹಂಚಿಕೊಳ್ಳುವ ಅಭ್ಯಾಸ ಇಬ್ಬರಲ್ಲೂ ಇರಬೇಕು. ಭಾವನೆಗಳ, ಯೋಚನೆಗಳ, ಅನಿಸಿಕೆಗಳ, ಅನುಭೂತಿ-ಅನುಭವಗಳ..... ಇತ್ಯಾದಿಗಳ ವಿನಿಮಯ ಅವರಿರ್ವರಲ್ಲಿ ನಿರಂತರ ನಡೆಯುತ್ತಿರಬೇಕು. ಗುಟ್ಟುಗಳಾಗಲಿ ರಹಸ್ಯಗಳಾಗಲಿ ಯಾವುದೂ ಇರಬಾರದು.

ಯಾವುದೇ ವಿಷಯವಾಗಲಿ ಹೇಳದೆ ಇದ್ದರೆ ತಪ್ಪಾಗುತ್ತದೆ, ಅಪರಾಧವಾಗುತ್ತದೆ, ಅನ್ಯಾಯವೆಸಗಿದಂತಾಗುತ್ತದೆ ಎಂದೆಲ್ಲ ಯೋಚಿಸಿ ಹೇಳುವುದಕ್ಕಿಂತಲೂ 'ಈ ವಿಷಯ' ಹಂಚಿಕೊಳ್ಳುವುದರಿಂದ ನಾವು ಇನ್ನಷ್ಟು ಹತ್ತಿರವಾಗುತ್ತೇವೆ ಎಂಬ ಭಾವನೆಯಿಂದ ಹೇಳುವುದು ಶ್ರೇಷ್ಠವಾಗುತ್ತದೆ. ಆದ್ದರಿಂದ ತನ್ನ ಬಾಳ ಸಂಗಾತಿಯೊಂದಿಗೆ "Shared joy is double joy and shared sorrow is half sorrow" (ಹಂಚಿಕೊಂಡ ಸಂತೋಷ ದ್ವಿಗುಣವಾಗುತ್ತದೆ ಹಾಗೂ ಹಂಚಿಕೊಂಡ ದು:ಖ ಅರ್ಧವಾಗುತ್ತದೆ) ಎಂಬ ನೀತಿಯನ್ನು ಅನುಸರಿಸಬೇಕು.

ನಮ್ಮಿಬ್ಬರ ನಡುವೆ ಯಾವತ್ತು ಹೆಪ್ಪುಗಟ್ಟಿದ ಸ್ಮಶಾನ ಮೌನವಿರಬಾರದು. ಒಂದು ವೇಳೆ ಮೌನವಿದ್ದರೂ ಅದು ನಮ್ಮಿಬ್ಬರ ಮನಸ್ಸುಗಳ ತಂತಿಯನ್ನು ಮೀಟಿ ಭಾವತರಂಗಗಳನ್ನು ಅಲೆ-ಅಲೆಯಾಗಿ ಸುಮಧುರ ಸಂಗೀತವಾಗಿ ಹೊರಸೂಸುವಂತಿರಬೇಕು.

ನಿರಾಸೆಯಿಂದ ಕೂಡಿದ ಕಂಬನಿಗೂ ಆನಂದ ಭಾಷ್ಪಕ್ಕೂ ದೂರದ ವ್ಯತ್ಯಸವಿಲ್ಲ ಎಂದು ನನಗೆ ಗೊತ್ತು. ಮುಂಜಾನೆಯ ಕೋಗಿಲೆಯ ‘ಕುಹೂ-ಕುಹೂ', ಗಿಳಿಗಳ ಚಿಲಿಪಿಲಿ, ಗುಬ್ಬಿಗಳ ಇಂಚರಗಳನ್ನು ಕೇಳುವುದು... ಬೆಳದಿಂಗಳಲ್ಲಿ ಮನೆಯ ಮಾಳಿಗೆಯ ಮೇಲೆ ಕುಳಿತು ಕಣ್ಣು ಹೊಡಿಯುವ ಕೋಟಿ ನಕ್ಷತ್ರಗಳ ಹೊಳಪನ್ನು ವೀಕ್ಷಿಸುವುದು…… ದುಂಬಿಗಳ ಜ್ಹೆಂಕಾರದಲ್ಲಿ ಓಂಕಾರದ ನಿನಾದವಿದೆ ಎಂದು ಅರಿಯುವುದು….ಪ್ರಕೃತಿ ಬಿಡಿಸಿಟ್ಟಿರುವ ಅಮೋಘ ಚಿತ್ರವನ್ನು ಜೀವಂತಗೊಳಿಸುವ ಬಣ್ಣ-ಬಣ್ಣದ ಚಿಟ್ಟೆಗಳನ್ನು ನೋಡುವುದು…. ಇವೆಲ್ಲ ಬದುಕಿಗೆ ಸಾಕಷ್ಟು ಆಹ್ಲಾದಕತೆಯನ್ನು ನೀಡುತ್ತವೆ. ಸೂರ್ಯ ರಶ್ಮಿಗೊಸ್ಕರ ಕಾದು ಕುಳಿತಿರುವ ಮುದುಡಿದ ತಾವರೆಗೂ ಕಿರಣಗಳಿಂದ ಸ್ಪರ್ಶಿತವಾಗಿ ಅರಳಿದ ತಾವರೆಗೂ ಇರುವ ಕಾಯುವಿಕೆಯ ಪ್ರಕ್ರಿಯೆಯನ್ನು ಕಂಡು ನಾನು ಬೆರಗಾಗುತ್ತೇನೆ.

ನಮ್ಮಿಬ್ಬರ ಮಧ್ಯೆ ಸ್ನೇಹಮಯ ವಾತಾವರಣವಿರಬೇಕೆಂದು ನನ್ನಾಸೆ. 'ಯಾವುದನ್ನು ನೀನು ಜಗತ್ತಿನ ಯಾರ ಮುಂದೆಯೂ ಹೇಳಲು ಸಾಧ್ಯವಿಲ್ಲವೊ ಅದನ್ನು ಒಂದು ವೇಳೆ ನಿನ್ನ ಬಾಳ ಸಂಗಾತಿಗೆ ಹೇಳಲು ನೀನು ಇಷ್ಟಪಟ್ಟರೆ....... ಖಂಡಿತ ನೀನು ಜಗತ್ತಿನ ಎಲ್ಲಕ್ಕೂ ಉತ್ತಮ ಬಾಳ ಸಂಗಾತಿಯನ್ನು ಹೊಂದಿರುವೆ' ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ಬದಕು ಒಂದು ವೀಣೆಯಂಥದ್ದು. ಜೋರಾಗಿ ಸಿಕ್ಕ ಸಿಕ್ಕ ಹಾಗೆ ಬಾರಿಸಲು ಹೋದರೆ ತಂತಿಗಳು ಕಡೆದು ವೀಣೆ ಕೆಲಸಕ್ಕೆ ಬಾರದಂತಾಗುತ್ತದೆ. ಅದನ್ನು ಮೃದುವಾಗಿ ಮೀಟಿದರೆ..... ಮಧುರ ಸಂಗೀತ ಹೊರಹೊಮ್ಮುತ್ತದೆ. ಹಾಗೆ ಹೊರ ಹೊಮ್ಮುವ ಸಂಗೀತವನ್ನು ಯಾವ ರಾಗಕ್ಕೆ, ಯಾವ ತಾಳಕ್ಕೆ, ಯಾವ ಹಾಡಿಗೆ ಹೊಂದಿಸಿಕೊಳ್ಳಬೇಕೆಂಬ ನಿರ್ಧಾರ ಕೂಡ ನಮಗೇ ಬಿಟ್ಟಿದ್ದು.



'ನೀನು ಕೊಳಲಾಗು ನಾನು ಗಾಳಿಯಾಗುವೆ
ನೀನು ವೀಣೆಯಾಗು ನಾನು ಬೆರಳಾಗುವೆ
ನೀನು ಹಕ್ಕಿಯಾಗು ನಾನು ರೆಕ್ಕೆಯಾಗುವೆ
ನೀನು ನವಿಲಾಗು ನಾನು ನಾಟ್ಯವಾಗುವೆ
ನೀನು ತುಟಿಗಳಾಗು ನಾನು ಮುಗುಳ್ನಗೆಯಾಗುವೆ.'


ಯಾವ ವಿಷಯವಾದರೂ ಪರವಾಗಿಲ್ಲ, ಪ್ರತಿಯೊಂದು ಕ್ಷಣವನ್ನೂ ಪೂರ್ಣವಾದ ತನ್ಮಯತೆಯಿಂದ ಕಳೆಯುವಂತಾದರೆ..... ಆಹಾ ! ಅದಕ್ಕಿಂತಲೂ ಸಂತಸದ ವಿಷಯ ಜಗತ್ತಿನಲ್ಲಿ ಬೇರೇನು ತಾನೆ ಇರಲು ಸಾಧ್ಯ ? ದುಂಬಿಯೊಂದು ಹೂವಿನ ಮಕರಂದ ಹೀರುವಾಗಿನ ತನ್ಮಯತೆ, ಮಗುವೊಂದು ತಾಯಿಯ ಎದೆಹಾಲು ಕುಡಿಯುವಾಗಿನ ತನ್ಮಯತೆ, ತನ್ನಿನಿಯನ ನೆನಪಿನಲ್ಲಿ ಮೈ ಮರೆಯುವ ನಲ್ಲೆಯ ತನ್ಮಯತೆ, ತುಂತುರು ಮಳೆ ಹನಿಯಲ್ಲಿ ನೆನದು ಬಂದು ಬಿಸಿ ಬಿಸಿ ಕಾಫಿ ಕುಡಿಯುವಾಗಿನ ತನ್ಮಯತೆ..... ಇವೆಲ್ಲ..... ಇವೆಲ್ಲವೂ ತನ್ನದೆಯಾದ ಮಧುರಾತಿಮಧುರ ಭಾವಗಳನ್ನು ತಮ್ಮಲ್ಲೆ ಅಡಗಿಸಿಕೊಂಡಿವೆ. ಈ ಎಲ್ಲವುಗಳ ತನ್ಮಯತೆ ಬಹಳಷ್ಟು ಕಡಿಮೆ ಕ್ಷಣಗಳನ್ನು ಹೊಂದಿರುತ್ತವೆಯಾದರೂ ಆ ಕ್ಷಣಗಳಲ್ಲಿ ಅನುಭವಿಸುವ ಆಹ್ಲಾದಕತೆಯನ್ನು ಅಭಿವ್ಯಕ್ತಿಸುವುದಕ್ಕೆ... ವರ್ಣಿಸುವುದಕ್ಕೆ ಸಾಧ್ಯವಾಗದಷ್ಟು ಮನೋಹರವಾಗಿರುತ್ತವೆ.

ನಮ್ಮಿಬ್ಬರ ನಡುವಿನಿಂದ ಹಾದು ಹೋಗುವ ಪ್ರತಿ ಕ್ಷಣವೂ ಇಂತಹುದೆ ತನ್ಮಯತೆಯಿಂದ ಕೂಡಿರಬೇಕೆಂಬ ಬಯಕೆ ನನ್ನದು. ನಿನಗೂ ಈ ಬಯಕೆ ಇರಬಹುದೆಂದು ಊಹಿಸುತ್ತೇನೆ.

ತಿಳಿ ಕಪ್ಪು ಬಾನಿನಲ್ಲಿ ಪೂರ್ಣಚಂದ್ರ ಮುಗುಳ್ನಗುತ್ತಿದ್ದಾನೆ. ಸಣ್ಣದಾಗಿ ತಂಗಾಳಿ ಬೀಸುತ್ತಿದೆ. ಪ್ರಶಾಂತವಾದ ವಾತಾವರಣವಿದೆ. ನಿನ್ನ ತೊಡೆಯ ಮೇಲೆ ತಲೆಯನಿಟ್ಟು ನಾನು ಚಿಕ್ಕ ಮಗುವಿನಂತೆ ಮಲಗಿದ್ದೇನೆ. ಬೆಳದಿಂಗಳ ಹಾಲಿನಲ್ಲಿ ಮೀಯುತ್ತಿರುವ ನಿನ್ನ ಮುಖದ ಮೇಲೆ ನನ್ನ ದೃಷ್ಟಿ ಇದೆ. ಆಗಾಗ ನನ್ನ ಬಲಗೈ ನಿನ್ನ ಮುಂಗುರುಳನ್ನು ಛೇಡಿಸುತ್ತಿದೆ. ನಿನ್ನ ಬೆರಳುಗಳು ನನ್ನ ಕೂದಲಿನೊಂದಿಗೆ ಆಟವಾಡುತ್ತಿವೆ. ನೀನೇನೇನೊ ಹೇಳುತ್ತಿರುವೆ. ಆದರೆ ನನಗದು ಅರ್ಥವಾಗುತ್ತಿಲ್ಲ. ನಿನ್ನ ಧ್ವನಿ ನನ್ನ ಕಿವಿಗಳ ತಮಟೆಗಳವರೆಗೂ ತಲಪುತ್ತಿದೆಯಾದರೂ ಮೆದಳು ಕೇವಲ ನನ್ನ ಕಣ್ಣುಗಳ ಸಂದೇಶವನ್ನಷ್ಟೆ ಸ್ವೀಕರಿಸುತ್ತಿದೆ. ಏಕೆಂದರೆ, ನನ್ನ ಕಣ್ಣುಗಳೆರಡೂ ನಿನ್ನ ಮೃದು ಗುಲಾಬಿ ತುಟಿಗಳ ಮೇಲೆ ತಮ್ಮ ದೃಷ್ಟಿ ನೆಟ್ಟಿವೆ. ನೀನು ಮಾತನಾಡುತ್ತಿರುವಾಗ ನಿನ್ನ ತುಟಿಗಳ ಬಡಿತ ಮತ್ತು ಕಂಪನವೂ ನನ್ನನ್ನು ಚುಂಬಕದಂತೆ ಆಕರ್ಷಿಸುತ್ತಿವೆ. ನಾನು ನನ್ನ ಎರಡೂ ಕೈಗಳಿಂದ ನಿನ್ನ ಕತ್ತನ್ನು ಬಳಸಿಕೊಂಡು ಇನ್ನೇನು...... ಅಷ್ಟರಲ್ಲೇ ನನ್ನ ಕಣ್ಣುಗಳು ತೆರೆಯುತ್ತವೆ. ನಿದ್ರೆಯಿಂದ ಎಚ್ಚರಗೊಳ್ಳುತ್ತೇನೆ. ಇಲ್ಲಿಗೆ ಸುಮಧುರ ಕನಸು ಮುಗಿಯುತ್ತದೆ. ಈ ಕನಸು ಯಾವತ್ತು ನನಸಾಗುತ್ತದೊ ? ನಿನ್ನನ್ನೆ ಕೇಳುತ್ತಿರುವೆ ಗೆಳತಿ, ಈ ನನ್ನ ಮಧುರ ಕನಸನ್ನು ಯಾವಾಗ ನನಸಾಗಿಸುತ್ತಿಯಾ ಹೇಳು ?

ಅಂದ ಹಾಗೆ ಈ ಪತ್ರದ ಜೊತೆಗೆ (ಗುಲಾಬಿ ಹೂ ಕಳುಹಿಸಿದರೆ ಬಾಡಿ ಹೋಗುತ್ತದೆಂಬ ಭಯದಿಂದ) ಒಂದು ನವಿಲುಗರಿಯನ್ನು ಕಳುಹಿಸುತ್ತಿರುವೆ, ಸ್ವೀಕರಿಸು.



ನಿನ್ನ ಬುದ್ಧಿ ಮಟ್ಟವಾಗಲಿ, ನಿನ್ನ ಮಾನಸಿಕತೆಯಾಗಲಿ ಅಥವಾ ನಿನ್ನ ವಿಚಾರಗಳ ಬಗ್ಗೆಯಾಗಲಿ ನನಗೆ ಏನೊಂದೂ ಗೊತ್ತಿಲ್ಲ. ಹೀಗಾಗಿ ಈ ಪತ್ರದಿಂದ ನಿನ್ನ ಭಾವನೆಗಳಿಗೆ ದಕ್ಕೆ ಉಂಟಾಗುವ ಸಂಭವವಿದೆ. ಹಾಗೇನಾದರೂ ದಕ್ಕೆ ಉಂಟಾಗಿದ್ದರೆ ಕ್ಷಮೆ ಇರಲಿ.

ಇಂತಿ ನಿನ್ನ ಮತ್ತು ಎಂದೆಂದಿಗೂ ನಿನ್ನವನೇ ಆದ
ಶೇಖರ್."

No comments:

Post a Comment